Friday, July 31, 2020

ವಿಜ್ಞಾನ ಲೋಕದ ಎವರ್‌ಗ್ರೀನ್ ರೈಟರ್ ಪ್ರಗುಣ್


ಒಬ್ಬ ಹದಿನೈದು ವರ್ಷದ ಪೋರ ವಿಜ್ಞಾನ ವಿಷಯಗಳ ಕುರಿತಾದ ಲೇಖನಗಳನ್ನು ಬರೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆಂದರೆ ಅದು ಸುಲಭದ ಮಾತಲ್ಲ. ಈಗಾಗಲೇ ಈ ಯುವ ಪ್ರತಿಭೆಯ ಲೇಖನಗಳು ಇಂದು ರಾಷ್ಟ್ರ ಮಟ್ಟದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನ ಲೋಕದ ಬರವಣಿಗೆಯಲ್ಲಿ ಛಾಪು ಮೂಡಿಸಿದ್ದಾನೆ. ಹೆಸರು ಪ್ರಗುಣ್ ಪುದಕೋಳಿ. ಬೆಂಗಳೂರಿನ ನಿವಾಸಿ ಉದಯಶಂಕರ ಪುದಕೋಳಿ ಮತ್ತು ವಿದ್ಯಾ ದಂಪತಿಯ ಪುತ್ರನಾದ ಈತ ಬೆಂಗಳೂರಿನ ಶಿಶುಗೃಹ ಮಾಂಟೆಸ್ಟರಿ ಮತ್ತು ಹೈಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ. ಪ್ರಗುಣ್‌ನ ಸಾಧನೆಯ ಪುಟ್ಟ ಪರಿಚಯ ನಿಮಗಾಗಿ...

ಅದು ಮಾಂಟೆಸ್ಟರಿಯಲ್ಲಿದ್ದ ಸಮಯ. ಎಂದಿನಂತೆ ಅಲ್ಲಿಯ ಶಿಕ್ಷಕರು ಈತನಿಗೆ ಆನೆಯ ಕುರಿತು ಪ್ರಬಂಧ ಬರೆಯಲು ನೀಡಿದ್ದರು. ಅಲ್ಲದೇ ಯಾವುದೇ ರೀತಿಯ ಸಹಾಯ ಮಾಡದಂತೆ ತಾಯಿ ವಿದ್ಯಾ ಅವರಿಗೆ ಸೂಚನೆಯನ್ನೂ ನೀಡಿದ್ದರು. ಇದರಿಂದ ತಾನೇ ಸ್ವತಃ ಪ್ರಬಂಧ ಬರೆದ ಪ್ರಗುಣ್ Elephant is having pair of tusks (ಆನೆಗೆ ಒಂದು ಜೊತೆ ದಂತಗಳು ಇವೆ.) ಎಂದು ಬರೆದಿದ್ದ. ನಾನಾಗಿದ್ದರೆ ಬಹುಶಃ 'ಟೂ ಟಕ್ಸ್' ಎಂದು ಹೇಳುತ್ತಿದ್ದೆ ಎಂದು ಆಶ್ಚರ್ಯಗೊಂಡು ಅಂದೇ ಗ್ರಂಥಾಲಯವೊಂದರಲ್ಲಿ ಸದಸ್ಯನನ್ನಾಗಿಸಿದರು. ಬಹುಶಃ ಅಂದು ನನ್ನ ಅಮ್ಮ ಪ್ರಬಂಧ ಬರೆಯಲು ಸಹಕರಿಸಿದ್ದರೆ ಇಂದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎನ್ನುತ್ತಾನೆ ಪ್ರಗುಣ್.

ಅಂದಿನಿಂದ ಓದುವ ಹವ್ಯಾಸ ಬೆಳೆಸಿಕೊಂಡ ಈತ ವಿಭಿನ್ನ ವಿಷಯಗಳ ಕುರಿತು ತಿಳಿದುಕೊಂಡಿದ್ದಲ್ಲದೇ ಬರೆಯಲೂ ಆರಂಭಿಸಿದ. 6ನೇ ವಯಸ್ಸಿಗೇ ಬರೆಯಲು ಪ್ರಾರಂಭಿಸಿದ ಪ್ರಗುಣ್ ಈವರೆಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಸರ, ವಿಜ್ಞಾನದ ಕುರಿತಾದ 40 ಕ್ಕೂ ಅಧಿಕ ಲೇಖನಗಳನ್ನು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಬರೆದಿದ್ದಾನೆ.

ಅಷ್ಟೇ ಅಲ್ಲದೇ, ನಾಸಾದ ಲಿಟರರಿ ಮೆರಿಟ್ ವಿಭಾಗದಲ್ಲಿ ಅಮೆಸ್ ಸ್ಪೇಸ್ ಸೆಟ್ಲ್‌ಮೆಂಟ್ ಸರ್ಧೆ 2017 ರಲ್ಲಿ ಪ್ರಶಸ್ತಿ ಗಳಿಸಿದ್ದಾರೆ‌. ಇವರ ಕವಿತೆಯನ್ನು ಮೆಚ್ಚಿದ ರೋಜರ್ ಸ್ಟಿವನ್ ತಮ್ಮ ಪೊಯೆಟ್ರಿ ಜೋನ್ ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಇದಲ್ಲದೆ ಬ್ರೈನ್‌ವೇವ್ ಸೈನ್ಸ್ ಮ್ಯಾಗಜೀನ್‌ನ ವಿದ್ಯಾರ್ಥಿ ಮಂಡಳಿಯ ಸದಸ್ಯನಾಗಿ ಸಪ್ಟೆಂಬರ್ 2015 ರಿಂದ ಜನವರಿ 2016 ರವರೆಗೆ ಕಾರ್ಯನಿರ್ವಹಿಸಿದ್ದು, ಟಿಂಕಲ್ ವಾಚ್ ಟೀಂನ ಗೌರವ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಈತನದ್ದು.

ಈತನ ಕಲೆ ಮತ್ತು ಸಾಹಿತ್ಯ ಸಾಧನೆಗಾಗಿ ಪ್ರಧಾನಮಂತ್ರಿ ಬಾಲ ಪುರಸ್ಕಾರ 2020 ಅರಸಿ ಬಂದಿದ್ದು, ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದ್ದಾನೆ.

ಈ ಪ್ರತಿಭೆಯಿಂದ ವಿಜ್ಞಾನ ಸಾಹಿತ್ಯ ಲೋಕ ಇನ್ನಷ್ಟು ಬೆಳೆಯಲಿ ಎಂಬುದು ಆಶಯ.

No comments:

Post a Comment